ಭಾನುಮತಿ 1

ಭಾರತದ ಪುರಾಣಕಾವ್ಯಗಳಲ್ಲಿ ನಾಲ್ವರು ಭಾನುಮತಿಯರು ಕಂಡುಬರುತ್ತಾರೆ.

	1. ಯದುವಂಶದ ಕೃತವೀರ್ಯನೆಂಬ ರಾಜನ ಮಗಳು. ಇವಳು ಚಂದ್ರವಂಶದ ಶರ್ಯಾತಿ ರಾಜನ ಮಗನಾದ ಅಹಂಯಾತಿಯನ್ನು ಮದುವೆಯಾಗಿ ಸಾರ್ವಭೌಮ ಎಂಬ ಪುತ್ರನನ್ನು ಪಡೆದಳು. 

	2. ದೇವಗುರು ಬೃಹಸ್ಪತ್ಯಾಚಾರ್ಯನ ಪತ್ನಿಯರ ಪೈಕಿ ಒಬ್ಬಳಾದ ಶುಭಾದೇವಿಯಲ್ಲಿ ಜನಿಸಿದ ಐದು ಮಂದಿ ಪುತ್ರಿಯರ ಪೈಕಿ ಒಬ್ಬಳು.

	3. ಶ್ರೀರಾಮನ ಜನನಿಯಾದ ಕೌಸಲ್ಯಾದೇವಿಗೂ ಈ ಹೆಸರಿದೆ. ಕಾರಣ ಈಕೆ ಕೋಸಲ ದೇಶದ ರಾಜನಾಗಿದ್ದ ಭಾನುಮಂತನ ಮಗಳು.

	4. ದುರ್ಯೋಧನನ ಹೆಂಡತಿ. ಪಂಪನ ವಿಕ್ರಮಾರ್ಜುನ ವಿಜಯಂ ಕಾವ್ಯದಲ್ಲಿ ಕರ್ಣನ ಸಂಗಡ ಪಗಡೆಯಾಡಿದ ಸಂದರ್ಭದಲ್ಲಿ ಈಕೆ ಕಾಣಿಸಿಕೊಳ್ಳುತ್ತಾಳೆ. ಕರ್ಣ ಮತ್ತು ದುರ್ಯೋಧನರ ಸ್ನೇಹವನ್ನು ಚಿತ್ರಿಸಲು ಪಂಪ ಈ ಸನ್ನಿವೇಶವನ್ನು ತಂದಿದ್ದಾನೆ.
(ಬಿ.ಎನ್.ಎನ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ